ರಾಜಕುಮಾರಿ ಸೋಫಿಯಾ ಅಲೆಕ್ಸಾಂಡ್ರೋವ್ನಾ ದುಲೀಪ್ ಸಿಂಗ್ (8 ಆಗಸ್ಟ್ 1876 - 22 ಆಗಸ್ಟ್ 1948) ಯುನೈಟೆಡ್ ಕಿಂಗ್‌ಡಂನ ಪ್ರಮುಖವಾದ ಸಫ್ರಜೆಟ್ (ಸಂಘಟಿತ ಪ್ರತಿಭಟನೆಯ ಮೂಲಕ ಮತ ಚಲಾಯಿಸುವ ಹಕ್ಕನ್ನು ಪ್ರತಿಪಾದಿಸುವ ಮಹಿಳೆ) ಆಗಿದ್ದರು. ಅವರ ತಂದೆ ಮಹಾರಾಜ ದುಲೀಪ್ ಸಿಂಗ್. ಭಾರತದಲ್ಲಿನ ಆಗಿನ ಗವರ್ನರ-ಜನರಲ್ ಡಾಲ್ಹೌಸಿಯ ರಾಜಕೀಯ ತಂತ್ರದಿಂದಾಗಿ, ದುಲೀಪ್ ಸಿಂಗ್ ತನ್ನ ಪಂಜಾಬ್ ರಾಜ್ಯವನ್ನು ಬ್ರಿಟಿಷ್ ರಾಜ್‍ಗೆ ಬಿಟ್ಟುಕೊಟ್ಟರು ಮತ್ತು ತರುವಾಯ ಅವರನ್ನು ಇಂಗ್ಲೆಂಡ್‍ಗೆ ಗಡೀಪಾರು ಮಾಡಲಾಯಿತು. ಸೋಫಿಯಾ ತಾಯಿ ಮಹಾರಾಣಿ ಬಂಬಾ ಮುಲ್ಲರ್, ಮತ್ತು ರಾಣಿ ವಿಕ್ಟೋರಿಯಾ ಅವರ ಧರ್ಮಮಾತೆಯಾಗಿದ್ದರು. ಅವರಿಗೆ ನಾಲ್ಕು ಜನ ಸಹೋದರಿಯರು ಸೇರಿದಂತೆ, ಇಬ್ಬರು ಮಲಸಹೋದರಿಯರು, ಮತ್ತು ನಾಲ್ಕು ಸಹೋದರರು ಇದ್ದರು. ರಾಣಿ ವಿಕ್ಟೋರಿಯಾರ ಅನುಗ್ರಹ ಹಾಗೂ ಒಲವಿನಿಂದ ದೊರೆತ ಹ್ಯಾಂಪ್ಟನ್ ಕೋರ್ಟ್ ಅಪಾರ್ಟ್‌ಮೆಂಟ್‍ನ ಫಾರಡೆ ಹೌಸ್‍ನಲ್ಲಿ ನೆಲೆಸಿದ್ದರು. ಇಪ್ಪತ್ತನೆಯ ಶತಮಾನದ ಆರಂಭದಲ್ಲಿ, ಬ್ರಿಟನ್‍ನಲ್ಲಿ ಮಹಿಳಾ ಹಕ್ಕುಗಳ ಕಾರಣಕ್ಕಾಗಿ ಮುಂಚೂಣಿಯಲ್ಲಿದ್ದ ಅನೇಕ ದಕ್ಷಿಣ ಏಷ್ಯಾದ ಮಹಿಳೆಯರಲ್ಲಿ ಸಿಂಗ್ ಕೂಡ ಒಬ್ಬರಾಗಿದ್ದರು. ಮಹಿಳಾ ತೆರಿಗೆ ನಿರೋಧಕ ಕೂಟ (' )ದಲ್ಲಿ ತನ್ನ ಪ್ರಮುಖ ಪಾತ್ರಕ್ಕಾಗಿ ಅವಳು ಹೆಸರುವಾಸಿಯಾಗಿದ್ದರೂ ಸಹ, ಮಹಿಳಾ ಸಮಾಜ ಮತ್ತು ರಾಜಕೀಯ ಒಕ್ಕೂಟವನ್ನೂ ಒಳಗೊಂಡಂತೆ ಇತರ ಮಹಿಳಾ ಮತದಾರರ ಗುಂಪುಗಳಲ್ಲಿ ಅವರು ಭಾಗವಹಿಸಿದರು. == ಆರಂಭಿಕ ಜೀವನ == ಸೋಫಿಯಾ ಅಲೆಕ್ಸಾಂಡ್ರಾ ದುಲೀಪ್ ಸಿಂಗ್ 1876 ರ ಆಗಸ್ಟ್ 8 ರಂದು ಬೆಲ್‍ಗ್ರಾವಿಯಾದಲ್ಲಿ ಜನಿಸಿದರು ಮತ್ತು ಸಫಕ್‍ನಲ್ಲಿ ವಾಸಿಸುತ್ತಿದ್ದರು. ಸೋಫಿಯಾ ಮಹಾರಾಜ ದುಲೀಪ್ ಸಿಂಗ್ (ಸಿಖ್ ಸಾಮ್ರಾಜ್ಯದ ಕೊನೆಯ ಮಹಾರಾಜ) ಮತ್ತು ಅವರ ಮೊದಲ ಪತ್ನಿ ಬಾಂಬಾ ಮುಲ್ಲರ್ ಅವರ ಮೂರನೇ ಮಗಳು. ಟಾಡ್ ಮುಲ್ಲರ್ ಆಂಡ್ ಕಂಪನಿಯ, ಜರ್ಮನ್ ವ್ಯಾಪಾರಿ ಬ್ಯಾಂಕರ್ ಲುಡ್ವಿಗ್ ಮುಲ್ಲರ್‌ ಮತ್ತು ಆತನ ಪ್ರೇಯಸಿ ಅಬಿಸಿನಿಯ ಮೂಲದ ಸೋಫಿಯಾರ ಮಗಳು, ಬಾಂಬಾ. ಮಹಾರಾಜ ಮತ್ತು ಬಾಂಬಾ ಹತ್ತು ಮಕ್ಕಳನ್ನು ಹೊಂದಿದ್ದರು, ಅವರಲ್ಲಿ ಆರು ಮಂದಿ ಬದುಕುಳಿದರು. ಬ್ರಿಟಿಷ್ ರಾಜಮನೆತನದ ಶ್ರೀಮಂತ ವಾತಾವರಣ, ಭಾರತೀಯ, ಯುರೋಪಿಯನ್, ಮತ್ತು ಆಫ್ರಿಕನ್ ಮನೆತನಗಳ ತಳುಕಿನಲ್ಲಿ ಸೋಫಿಯಾ ಬೆಳೆದಳು. ಆಕೆಯ ತಂದೆ 11 ನೇ ವಯಸ್ಸಿನಲ್ಲಿ ಬ್ರಿಟಿಷರಿಗೆ ತನ್ನ ಸಾಮ್ರಾಜ್ಯವನ್ನು ಬಿಟ್ಟುಕೊಡುವದಲ್ಲದೆ, ರಾಣಿ ವಿಕ್ಟೋರಿಯಾಳಿಗೆ ಕೊಹ್-ಇ-ನೂರ್ ವಜ್ರವನ್ನು ನೀಡಿದ್ದಕ್ಕಾಗಿ ಪ್ರಸಿದ್ಧರಾಗಿದ್ದರು. 15 ನೇ ವಯಸ್ಸಿನಲ್ಲಿ ಅವರು ಬ್ರಿಟೀಷರಿಂದ ಭಾರತದಿಂದ ಗಡಿಪಾರುಗೊಂಡರು ಮತ್ತು ಇಂಗ್ಲೆಂಡ್‍ಗೆ ತೆರಳಿದರು. ಅಲ್ಲಿ ರಾಣಿ ವಿಕ್ಟೋರಿಯಾ ಅವರನ್ನು ಒಲವಿನಿಂದ ನೋಡಿಕೊಂಡರಲ್ಲದೇ, ಅವನ ರಕ್ಷಣೆಗೆ ಸಹಾಯ ಮಾಡಿದರು. ದುಲೀಪ್ ಸಿಂಗ್ ತನ್ನ ಆಕರ್ಷಕ ವ್ಯಕ್ತಿತ್ವ ಮತ್ತು ವರ್ತನೆಯಿಂದ ರಾಣಿ ವಿಕ್ಟೋರಿಯಾಳ ಮೆಚ್ಚುಗೆಗಳಿಸಿದನು. ಲಂಡನ್‍ನಲ್ಲಿ, ದುಲೀಪ್ ಸಿಂಗ್ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡರು. ನಂತರದ ಜೀವನದಲ್ಲಿ, ದೊಡ್ಡ ಸಾಮ್ರಾಜ್ಯದಿಂದ ಮೋಸಗೊಳಿಸಲ್ಪಟ್ಟಿದ್ದಾರೆಂದು ಅವರು ತಿಳಿದುಕೊಂಡ ನಂತರ ಸಿಖ್ ಧರ್ಮಕ್ಕೆ ಮರುಮತಾಂತರಗೊಂಡರು ಮತ್ತು ಭಾರತದಲ್ಲಿನ ಸ್ವಾತಂತ್ರ್ಯ ಚಳವಳಿಯನ್ನು ಸಮರ್ಥಿಸಿಕೊಂಡರು. 10 ನೇ ವಯಸ್ಸಿನಲ್ಲಿ ಸಿಂಗ್ ಟೈಫಾಯಿಡ್ನಿಂದ ಬಳಲುತ್ತಿದ್ದಳು. ಅವಳನ್ನು ನೋಡಿಕೊಳ್ಳುತ್ತಿದ್ದ ತಾಯಿ ಬಾಂಬಾಗೆ ಈ ಖಾಯಿಲೆಯು ಸೋಂಕಿ, ಕೋಮಾಕ್ಕೆ ಬಿದ್ದು 17 ಸೆಪ್ಟೆಂಬರ್ 1887 ರಂದು ನಿಧನರಾದರು. 31 ಮೇ 1889 ರಂದು ಆಕೆಯ ತಂದೆ ಅಡಾ ವೆಥೆರಿಲ್ ಎಂಬ ಓರ್ವ ಮನೆಗೆಲಸದವಳನ್ನು ಮದುವೆಯಾದರು. ಅವರಿಗೆ ಇಬ್ಬರು ಹೆಣ್ಣುಮಕ್ಕಳು ಜನಿಸುತ್ತಾರೆ.ಸಿಂಗ್ ಅವರ ಸಹೋದರರಲ್ಲೊಬ್ಬ, ಫ್ರೆಡೆರಿಕ್ ದುಲೀಪ್ ಸಿಂಗ್; ಆಕೆಯ ಇಬ್ಬರು ಸಹೋದರಿಯರು ಕ್ಯಾಥರಿನ್ ದುಲೀಪ್ ಸಿಂಗ್ (ಒಬ್ಬ ಸಫರ್ಜೆಟ್), ಮತ್ತು ಬಾಂಬ ದುಲೀಪ್ ಸಿಂಗ್. 1893 ರಲ್ಲಿ, ಅವರ ತಂದೆಯ ಮರಣದ ನಂತರ, ಗಣನೀಯ ಪ್ರಮಾಣದ ಸಂಪತ್ತನ್ನು ಪಿತ್ರಾರ್ಜಿತವಾಗಿ ಪಡೆದರು. 1898 ರಲ್ಲಿ ಹ್ಯಾಂಪ್ಟನ್ ಕೋರ್ಟ್ ಅಪಾರ್ಟ್‌ಮೆಂಟ್‍ನ ಫಾರಡೆ ಹೌಸ್ ಅನ್ನು ರಾಣಿ ವಿಕ್ಟೋರಿಯಾ ನೀಡಿದರು. ರಾಣಿ ವಿಕ್ಟೋರಿಯಾ, ದುಲೀಪ್ ಸಿಂಗ್ ಮತ್ತು ಅವರ ಕುಟುಂಬದವರನ್ನು ಇಷ್ಟಪಡುತ್ತಿದ್ದರು. ವಿಶೇಷವಾಗಿ ಸೋಫಿಯಾ, ಅವಳ ಮುದ್ದಿನ ರಾಜಕುವರಿಯಾಗಿದ್ದಳು. ರಾಣಿ ವಿಕ್ಟೋರಿಯಾ, ಸೋಫಿಯಾ ಮತ್ತವಳ ಸಹೋದರಿಯರು ಸಮಾಜವಾದಿಗಳಾಗಿರಲು ಪ್ರೋತ್ಸಾಹಿಸಿದರು. ಸೋಫಿಯಾ ತನ್ನ ಸೊಗಸಾದ ವಸ್ತ್ರಗಳೊಂದಿಗೆ, ಪ್ಯಾರಿಸ್ ಉಡುಪುಗಳನ್ನು ಧರಿಸುವುದಲ್ಲದೇ, ಚಾಂಪಿಯನ್‍ಶಿಪ್ ನಾಯಿಗಳ ಸಾಕುವಿಕೆ, ಛಾಯಾಗ್ರಹಣ, ಸೈಕ್ಲಿಂಗ್ ಮತ್ತು ಅದ್ದೂರಿ ಔತಣಕೂಟಗಳಿಗೆ ಹಾಜರಾಗುತ್ತಿದ್ದರು. ಸಿಂಗ್ ಹತ್ತು ವರ್ಷದವಳಾಗಿದ್ದಾಗ, ಲಂಡನ್‍ನಲ್ಲಿ ತನ್ನ ತಂದೆಯ ಸಂಪತ್ತು ಕರಗುತ್ತಿದ್ದ ಸಮಯದಲ್ಲಿ, ತನ್ನ ತಂದೆ ಮತ್ತು ಸಹೋದರಿಯರೊಂದಿಗೆ ಭಾರತಕ್ಕೆ ತೆರಳಲು ಪ್ರಯತ್ನಿಸಿದರಾದರೂ, ಬಂಧನ ವಾರಂಟ್‍ಗಳ ಮೂಲಕ ಅವರನ್ನು ಅಡೆನ್‍ಗೆ ಹಿಂತಿರುಗಿಸಲಾಯಿತು. ಅವಳ ತಂದೆ ಅವಳನ್ನು ತಿರಸ್ಕರಿಸಿದರೂ, 1896 ರಲ್ಲಿ ವಿಕ್ಟೋರಿಯಾ ಅವಳನ್ನು ಮೂರು-ಮಹಡಿಗಳ ಫ್ಯಾರಡೆ ಹೌಸ್ ಮತ್ತು ಅದರ ನಿರ್ವಹಣೆಗೆ £200 ಭತ್ಯೆ ನೀಡಿದರು. ಪಂಜಾಬಿನ ರಾಣಿ ಎಂದು ಗುರುತಿಸಿಕೊಳ್ಳುತ್ತಿದ್ದ ಸಿಂಗ್, ಆರಂಭದಲ್ಲಿ ಫ್ಯಾರಡೆ ಹೌಸ್‍ನಲ್ಲಿ ಇರಲಿಲ್ಲ; ಆಕೆಯ ಸಹೋದರ ಪ್ರಿನ್ಸ್ ಫ್ರೆಡೆರಿಕ್ ಬಳಿ ಓಲ್ಡ್ ಬಕೆನ್‍ಹ್ಯಾಮ್‍ನಲ್ಲಿನ ಮ್ಯಾನರ್ ಹೌಸ್‍ನಲ್ಲಿ ಅವರು ವಾಸವಾಗಿದ್ದರು. ಅನಾರೋಗ್ಯದಿಂದ ಆಕೆಯ ತಂದೆ ಒಂದು ಅತೀ ಸಾಮಾನ್ಯವಾದ, ಹಾಳುಬೀಳುತ್ತಿದ್ದ ಪ್ಯಾರಿಸ್ ಹೊಟೇಲ್‍ನಲ್ಲಿ, 1895 ರ ಅಕ್ಟೋಬರ್ 22 ರಂದು 55 ನೇ ವಯಸ್ಸಿನಲ್ಲಿ ನಿಧನರಾದರು. ಅಮೆರಿಕಾದ ರಾಜ್ಯವಾದ ಇಲಿನಾಯ್‍ನ ಶಿಕಾಗೊದ, ನಾರ್ತ್ ವೆಸ್ಟೆರ್ನ್ ವುಮೆನ್ಸ್ ಮೆಡಿಕಲ್ ಕಾಲೇಜಿನಲ್ಲಿ ಸ್ವಲ್ಪ ಸಮಯದವರೆಗೆ ಸಿಂಗ್ ಅಧ್ಯಯನ ಮಾಡಿದರು. ಕುಗ್ಗಿದ, ನಾಚಿಕೆ ಸ್ವಭಾವದ, ದುಃಖತೃಪ್ತ ಸಿಂಗ್ ಮೇಲಿನ ಹಿಡಿತವನ್ನು ಬ್ರಿಟಿಷ್ ಸರ್ಕಾರವು ಸಡಿಲಿಸಿತು. ಶೀಘ್ರದಲ್ಲೇ ಅದು ತಪ್ಪು ಎಂದು ಸಾಬೀತಾಯಿತು. 1903 ರ ದೆಹಲಿ ದರ್ಬಾರ್‌ಗೆ ಹಾಜರಾಗಲು ಅವಳು ತನ್ನ ಸಹೋದರಿ ಬಾಂಬಾರೊಂದಿಗೆ ಭಾರತಕ್ಕೆ ರಹಸ್ಯ ಪ್ರವಾಸವನ್ನು ಮಾಡಿದರು, ಅಲ್ಲಿ ಅವಳು ನಿರ್ಲಕ್ಷಿಸಲ್ಪಟ್ಟಳು. ಇಂಗ್ಲೆಂಡ್‍ನಲ್ಲಿನ ಸಾರ್ವಜನಿಕ ಮತ್ತು ಮಾಧ್ಯಮ ಜನಪ್ರಿಯತೆಯ ನಿಷ್ಫಲತೆ ಗೋಚರವಾಗಿತ್ತು. ತನ್ನ ಗತಿ ಹಾಗೂ ದಿಶೆಯನ್ನು ಬದಲಿಸುವ ಪಣತೊಟ್ಟು ಇಂಗ್ಲೆಂಡ್‍ಗೆ ಹಿಂತಿರುಗಿದಳು. 1907 ರ ಭಾರತ ಪ್ರವಾಸದಲ್ಲಿ ಅವರು ಅಮೃತಸರ ಮತ್ತು ಲಾಹೋರ್ಗೆ ಭೇಟಿ ನೀಡಿದರು ಮತ್ತು ಸಂಬಂಧಿಕರನ್ನು ಭೇಟಿಯಾದರು. ಅಲ್ಲಿ ಅವರು ಬಡತನದ ವಾಸ್ತವತೆಗಳ ಬಗ್ಗೆ ಮನವರಿಕೆಗೊಂಡರಲ್ಲದೆ, ಬ್ರಿಟಿಷ್ ಸರ್ಕಾರಕ್ಕೆ ಶರಣಾಗುವ ಮೂಲಕ ಅವರ ಕುಟುಂಬವು ಕಳೆದುಕೊಂಡ ಮೌಲ್ಯದ ಅರಿವಾಗಿ, ಅವರ ಜೀವನದ ಮುಖ್ಯ ಘಟನೆಯಾಗಿ ಈ ಭೇಟಿ ಉಳಿಯಿತು. ಭಾರತದಲ್ಲಿ, ಸಿಂಗ್ ಲಾಹೋರ್‌ನ ಷಾಲಿಮಾರ್ ಬಾಗ್‍ನಲ್ಲಿ (ತನ್ನ ತಾತ ರಾಜಧಾನಿಯ) ಒಂದು "ಪರ್ದಾ ಪಕ್ಷದ" ಆತಿಥ್ಯ ವಹಿಸಿದ್ದರು. ಈ ಭೇಟಿಯ ಸಮಯದಲ್ಲಿ ಬ್ರಿಟಿಷ್ ಏಜೆಂಟರು ಹಿಂಬಾಲಿಸುತ್ತಿದ್ದರೂ, ಅವರು ಗೋಪಾಲ ಕೃಷ್ಣ ಗೋಖಲೆ ಮತ್ತು ಲಾಲಾ ಲಜಪತ ರಾಯ್ ಮುಂತಾದ ಭಾರತೀಯ ಸ್ವಾತಂತ್ರ ಹೋರಾಟಗಾರರನ್ನು ಭೇಟಿಯಾದರು. ಅವರ ಹೋರಾಟಕ್ಕೆ ತಮ್ಮ ಸಹಾನುಭೂತಿಯನ್ನು ವ್ಯಕ್ತಪಡಿಸಿದರು. ರಾಯ್‍ರವರ ಮೇಲಿದ್ದ "ದೇಶದ್ರೋಹದ ಆರೋಪ" ಸಿಂಗರನ್ನು ಬ್ರಿಟಿಷ ಸಾಮ್ರಾಜ್ಯದ ವಿರುದ್ಧ ತಿರುಗಿ ಬೀಳುವಂತೆ ಪ್ರೇರೇಪಿಸಿತು. 1909 ರಲ್ಲಿ ಆಕೆಯ ಸಹೋದರ ತಮ್ಮ ಸಹೋದರಿಯರಿಗೆ ಬ್ಲೋ ನಾರ್ಟನ್, ತೇಶ್ಡ್ ಕಾಟೇಜ್ ಮತ್ತು ಬ್ಲೋ ನಾರ್ಟನ್ ಹಾಲ್, ದಕ್ಷಿಣ ನಾರ್ಫೋಕ್‍ನಲ್ಲಿ ತಮಗಾಗಿ ಒಂದು ಮನೆಯನ್ನು ಖರೀದಿಸಿದರು. ಆ ವರ್ಷ, ಸೋಫಿಯಾ ಮಹಾತ್ಮ ಗಾಂಧಿಯವರ ವೆಸ್ಟ್ ಮಿನಿಸ್ಟರ್ ಪ್ಯಾಲೇಸ್ ಹೋಟೆಲ್‍ನಲ್ಲಿ ನಡೆದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಸೋಫಿಯಾಳ ಹಿರಿಯ ಸಹೋದರಿಯಾದ ಬಾಂಬ ದುಲೀಪ್ ಸಿಂಗ್, ಲಾಹೋರ್‌ನ ಕಿಂಗ್ ಎಡ್ವರ್ಡ್ಸ್ ಮೆಡಿಕಲ್ ಕಾಲೇಜಿನ ಮುಖ್ಯಸ್ಥರಾದ ಡಾ.ಕೊಲೋನಲ್ ಸದರ್‌ಲ್ಯಾಂಡ್‍ರನ್ನು ವಿವಾಹವಾದರು. ಅವರಿಗೆ ಮಕ್ಕಳಿರಲಿಲ್ಲ. == ನಂತರದ ಜೀವನ ಮತ್ತು ಮಹಿಳಾ ಪ್ರಗತಿ ಹೋರಾಟ == ಸಿಂಗ್ 1909 ರಲ್ಲಿ ಭಾರತದಿಂದ ಹಿಂದಿರುಗಿದ ನಂತರ, ಪ್ಯಾನ್-ಖರ್ಸ್ಟ್ ಸಹೋದರಿಯ ಸ್ನೇಹಿತನಾದ ಉನಾ ಡಗ್ಡೇಲ್‍ನ ಅಣತಿಯಂತೆ ಮಹಿಳಾ ಸಮಾಜ ಮತ್ತು ರಾಜಕೀಯ ಒಕ್ಕೂಟ ( - ' )ಗೆ ಸೇರಿದರು; ಎಮ್ಮಲೀನ್ ಪ್ಯಾನ್‍ಖರ್ಸ್ಟ್ 1889 ರಲ್ಲಿ ವಿಮೆನ್ಸ್ ಫ್ರ್ಯಾಂಚೈಸ್ ಲೀಗ್ ಅನ್ನು ಸ್ಥಾಪಿಸಿದರು. 1909 ರಲ್ಲಿ, ಸಿಂಗ್ ಸಫರ್ಜೆಟ್ ಗುಂಪುಗಳಿಗೆ ಹಣಕಾಸು ನೆರವು ನೀಡಿದ್ದಲ್ಲದೆ, ಮಹಿಳೆಯರ ಮಹಿಳಾ ಮತದಾನದ ಹಕ್ಕಿನ ಚಳುವಳಿಯ ಮುಂಚೂಣಿಯಲ್ಲಿದ್ದರು. ಅವರು ತೆರಿಗೆಯನ್ನು ಪಾವತಿಸಲು ನಿರಾಕರಿಸಿ ಸರ್ಕಾರದ ಕೆಂಗಣ್ಣಿಗೆ ಕಾರಣರಾದರು. ಕಿಂಗ್ ಜಾರ್ಜ್ , "ನಾವು ಅವಳನ್ನು ಹಿಡಿತದಲ್ಲಿಟ್ಟಿಲ್ಲವೇ?" ಎಂದು ಕೆರಳಿದ್ದರು. ಬ್ರಿಟಿಷ್ ಆಗಿದ್ದ ಸಿಂಗ್ ಅವರ ಮೂಲ ಆಸಕ್ತಿಯು ಇಂಗ್ಲೆಂಡ್‍ನಲ್ಲಿ ಮಹಿಳಾ ಹಕ್ಕುಗಳಾಗಿದ್ದರೂ ಸಹ, ಅವಳು ಮತ್ತು ಅವಳ ಸಹ-ಸಫರ್ಜೆಟ್‍ಗಳು ಬ್ರಿಟಿಷ್ ವಸಾಹತು ಪ್ರದೇಶಗಳಲ್ಲಿ ಕೂಡಾ ಇದೇ ಚಟುವಟಿಕೆಗಳನ್ನು ಪ್ರಚಾರ ಮಾಡಿದರು. ಅವರು ತಮ್ಮ ಭಾರತೀಯ ಪರಂಪರೆಯ ಮೌಲ್ಯವನ್ನು ಎತ್ತಿಹಿಡಿದಿದ್ದರೂ, ಯಾವುದೇ ಒಂದು ರಾಷ್ಟ್ರಕ್ಕೆ ಸೀಮಿತಗೊಳ್ಳದೇ, ಹಲವಾರು ರಾಷ್ಟ್ರಗಳಲ್ಲಿ ಮಹಿಳಾ ಚಳಿವಳಿಗಳನ್ನು ಬೆಂಬಲಿಸಿದರು. ಅವಳ ಹೆಸರಿನಲ್ಲಿದ್ದ, ರಾಜಕುಮಾರಿ ಪದ ಬಹಳ ಉಪಯುಕ್ತವಾಗಿತ್ತು. ತಾವು ನೆಲೆಸಿದ್ದ ಹ್ಯಾಂಪ್ಟನ್ ಕೋರ್ಟ್ ಪ್ಯಾಲೇಸ್‍ನ ಹೊರಗೆ "ದಿ ಸಫರ್ಜೆಟ್" ಪತ್ರಿಕೆ ಮಾರಾಟ ಮಾಡಿದರು. ಲಾರ್ಡ್ ಕ್ರೆವ್‍ನ ಪತ್ರವೊಂದರ ಪ್ರಕಾರ, ಕಿಂಗ್ ಜಾರ್ಜ್ , ಸಿಂಗರನ್ನು ಹೊರಹಾಕಲು ತಕ್ಕ ಹಕ್ಕುಗಳನ್ನು ಹೊಂದಿದ್ದರು. 1910 ರ ನವೆಂಬರ್ 18 ರಂದು ಸಿಂಗ್, ಎಮ್ಮಲೀನ್ ಪ್ಯಾನ್‍ಖರ್ಸ್ಟ್ ಮತ್ತು ಕಾರ್ಯಕರ್ತರ ಗುಂಪು ಹೌಸ್ ಆಫ್ ಕಾಮನ್ಸ್‌ಗೆ ಭೇಟಿ ನೀಡಿ, ಪ್ರಧಾನ ಮಂತ್ರಿಯೊಡನೆಯ ಮಾತುಕತೆಗೆ ಆಶಿಸಿದರು. ಅಲ್ಲಿನ ಗೃಹ ಕಾರ್ಯದರ್ಶಿ ಈ ಗುಂಪುಗಳನ್ನು ಹೊರದಬ್ಬುವುದಕ್ಕೆ ಆದೇಶಿಸಿದರು. ಇದರಿಂದಾಗಿ ಅನೇಕ ಮಹಿಳೆಯರು ಗಂಭೀರವಾಗಿ ಗಾಯಗೊಂಡರು. ಈ ಘಟನೆಯು ಕಪ್ಪು ಶುಕ್ರವಾರ ( ) ಎಂದು ಹೆಸರಾಗಿದೆ. ಮೊದಲಿಗೆ, ಸಿಂಗ್ ಸುಪ್ತವಾದ ಜೀವನ ನಡೆಸುತ್ತಿದ್ದರು. 1911 ರಲ್ಲಿ ಅವರು ಸಾರ್ವಜನಿಕವಾಗಿ ಅಥವಾ ಮಹಿಳೆಯರ ಸಾಮಾಜಿಕ ಮತ್ತು ರಾಜಕೀಯ ಒಕ್ಕೂಟ ಸಭೆಗಳಲ್ಲಿ ಭಾಷಣ ಮಾಡಲು ಹಿಂಜರಿಯುತ್ತಿದ್ದರು. WSPUದ ಇತರೆ ಕಾರ್ಯಕರ್ತರಲ್ಲಿ, ಅವರು ತಮ್ಮನ್ನು "ನಿಷ್ಪ್ರಯೋಜಕ" ಎಂದು ಕರೆದುಕೊಂಡರಲ್ಲದೆ, "ಮುಂಬರುವ ನಿರ್ಣಯವನ್ನು ಯಾರೂ ಬೆಂಬಲಿಸದಿದ್ದರೆ ಒಂದೆರಡು ಮಾತು"ಗಳನ್ನು ಹೇಳುವ ಭರವಸೆ ನೀಡಿ ಸಭೆಗಳಲ್ಲಿ ಭಾಗವಹಿಸಲು ನಿರಾಕರಿಸಿದರು. ಹೀಗಿದ್ದರೂ, ಸಿಂಗ್ ನಂತರದ ಹಲವಾರು ಸಭೆಗಳಲ್ಲಿ ಹಾಜರಿದ್ದು, ಅಧ್ಯಕ್ಷತೆ ವಹಿಸಿದ್ದರು.ಇಂಗ್ಲೆಂಡಿನ ಭಾರತೀಯ ವಿದ್ಯಾರ್ಥಿಯಾಗಿದ್ದ ಹೀರಾಭಾಯಿ, 1911 ರಲ್ಲಿ ಸಿಂಗ್ "ಮಹಿಳೆಯರಿಗೆ ಮತದ ಹಕ್ಕು" ( ) ಎಂಬ ಧ್ಯೇಯವಾಕ್ಯದ ಸಣ್ಣ ಬ್ಯಾಡ್ಜ್ ಅನ್ನು ಹೊಂದಿರುತ್ತಿದ್ದರು ಎಂದು ಉಲ್ಲೇಖಿಸಿದ್ದಾರೆ. ಮಹಿಳಾ ತೆರಿಗೆ ನಿರೋಧಕ ಕೂಟಕ್ಕೆ ಹಣಕಾಸು ನೆರವು ನೀಡುವ ಸಲುವಾಗಿ ತನ್ನ ಸ್ವತ್ತಿನ ಹರಾಜಿಗೆ ಸಿಂಗ್ ಅನುಮತಿ ನೀಡಿದರು. "ದಿ ಸಫರ್ಜೆಟ್" ಚಂದಾದಾರಿಕೆ ಕೊಳ್ಳುವಂತೆ ಕರೆಯಿತ್ತರು. ಸ್ವತಃ ದಿ ಸಫ್ರಾಗೆಟ್ ವೃತ್ತಪತ್ರಿಕೆ ಅವರ ಮನೆಯ ಹೊರಗೆ ಮತ್ತು ಪತ್ರಿಕೆಯ ಅಂಗಡಿಗಳಿಂದ ಮಾರಾಟ ಮಾಡಿದರು. 22 ಮೇ 1911 ರಂದು ಒಬ್ಬ ತರಬೇತುದಾರ, ಒಬ್ಬ ಸಹಾಯಕ, ಮತ್ತು ಐದು ನಾಯಿಗಳನ್ನು ಅಕ್ರಮವಾಗಿ ಇಟ್ಟಿಕೊಂಡಿದ್ದರೆಂದು ಮತ್ತು ಶಸ್ತ್ರಾಸ್ತ್ರಗಳ ಬಳಕೆಗಾಗಿ ಅವರಿಗೆ ಸ್ಪಿಲ್ಥೋರ್ನ್ ಪೆಟ್ಟಿ ಸೆಷನ್ಸ್ ಕೋರ್ಟ್ £3 ದಂಡ ವಿಧಿಸಿತು. ತಮಗೆ ಮತದಾನದ ಹಕ್ಕು ಇಲ್ಲವಾದದ್ದರಿಂದ ಪರವಾನಗಿ ಶುಲ್ಕವನ್ನು ಪಾವತಿಸುವ ಅಗತ್ಯವಿಲ್ಲವೆಂದು ಪ್ರತಿಭಟಿಸಿದರು. ಅದೇ ಜುಲೈನಲ್ಲಿ ದಂಡಾಧಿಕಾರಿ ಬಾಕೀ ಇದ್ದ 14 ಷಿಲ್ಲಿಂಗ್‍ಗಳ (೧ ಷಿಲ್ಲಿಂಗ್ = ೧/೨೦ ಪೌಂಡ್) ದಂಡವನ್ನು ಸಂಗ್ರಹಿಸಲು ಸಿಂಗ್ ಅವರ ಮನೆಗೆ ತೆರಳಿದರು, ಆಕೆ ಅದನ್ನು ಪಾವತಿಸಲು ನಿರಾಕರಿಸಿದರು. ಆಕೆಯ ವಜ್ರದ ಉಂಗುರವನ್ನು ಪೊಲೀಸರು ವಶಪಡಿಸಿಕೊಂಡರು ಮತ್ತು ಕೆಲವು ದಿನಗಳ ನಂತರ ಹರಾಜು ಹಾಕಿದರು; ಒಬ್ಬ ಸ್ನೇಹಿತ ಅದನ್ನು ಖರೀದಿಸಿ ಸಿಂಗರಿಗೆ ಹಿಂದಿರುಗಿಸಿದನು. ಡಿಸೆಂಬರ್ 1913 ರಲ್ಲಿ, ಎರಡು ನಾಯಿಗಳು, ಸಾರೋಟು ಮತ್ತು ಒಬ್ಬ ಸೇವಕನ ಪರವಾನಗಿ ಶುಲ್ಕ ಪಾವತಿಸಲು ನಿರಾಕರಿಸಿದ್ದಕ್ಕೆ ಸಿಂಗ್‍ರಿಗೆ £ 12.10 ರಷ್ಟು ದಂಡ ವಿಧಿಸಲಾಯಿತು. 13 ಡಿಸೆಂಬರ್ 1913 ರಂದು ಅವಳು ಮತ್ತು ಇತರ ಸದಸ್ಯರು ನ್ಯಾಯಾಲಯದಲ್ಲಿ ಕಾಣಿಸಿಕೊಂಡಾಗ, ಪರವಾನಗಿ ಇಲ್ಲದೆ ನಾಯಿಗಳನ್ನು ಸಾಕುತ್ತಿರುವರೆಂದು ಸಿಂಗ್‍ರನ್ನು ಮತ್ತೆ ಆರೋಪಿಸಲಾಯಿತು. "ಮಹಿಳೆಯರಿಗೆ ಮತ ನೀಡಿ!" ಎಂಬ ಭಿತ್ತಿಪತ್ರ ಹಿಡಿದು ಪ್ರಧಾನಮಂತ್ರಿ ಹರ್ಬರ್ಟ್ ಹೆನ್ರಿ ಆಸ್ಕ್‌ವಿತ್ ಅವರ ಕಾರಿನ ಎದುರು ಬಂದು ತಡೆಯೊಡ್ಡುವ ಪ್ರಯತ್ನ ಮಾಡಿದರು. ಬಾಂಬುಗಳನ್ನು ತಯಾರಿಸಲು ಬೆಂಬಲ ನೀಡುವ ಮೂಲಕ ಬ್ರಿಟನ್‍ನಲ್ಲಿ ಅರಾಜಕತೆಯನ್ನು ಉತ್ತೇಜಿಸಿದರು. ಸಿಂಗ್‍ರವರ ಈ ಹೋರಾಟಗಳ ಹೊರತಾಗಿಯೂ, ಅವಳು ಎಂದಿಗೂ ಬಂಧಿಸಲ್ಪಡಲಿಲ್ಲ; ಆದಾಗ್ಯೂ ಅವರ ಚಟುವಟಿಕೆಗಳನ್ನು ಆಡಳಿತವು ನೋಡಿದರೂ, ಹುತಾತ್ಮರ ಸಾಲಿಗೆ ಸೇರಬಹುದೆಂಬ ಭಯದಿಂದ ಆಡಳಿತದವರು ಅವರಿಂದ ದೂರವೇ ಉಳಿದಿದ್ದರು. ಮೊದಲನೇ ಮಹಾಯುದ್ಧದ ಸಮಯದಲ್ಲಿ, ಸಿಂಗ್ ಅವರು ಮೊದಲಿಗೆ ಬ್ರಿಟಿಷ್ ನೌಕಾಪಡೆಯಲ್ಲಿ ಕೆಲಸ ಮಾಡುತ್ತಿರುವ ಭಾರತೀಯ ಮತ್ತು ಆಗ್ನೇಯ ಏಷ್ಯಾದ ಸೈನಿಕರಿಗೆ ಬೆಂಬಲ ನೀಡಿದರು. ಸ್ವಯಂ ಪ್ರೇರಣೆಯಿಂದ ಸೈನ್ಯಕ್ಕೆ ಸೇರುವುದರಿಂದ ಮಹಿಳೆಯರನ್ನು ನಿಷೇಧಿಸುವ ಕಾನೂನಿನ ವಿರುದ್ಧ 10,000-ಮಹಿಳಾ ಪ್ರತಿಭಟನಾ ಮೆರವಣಿಗೆಗೆ ಸೇರಿದರು. ಅವರು ಅಂತಿಮವಾಗಿ, ರೆಡ್ ಕ್ರಾಸ್ ಸಮವಸ್ತ್ರವನ್ನು ಧರಿಸಿ, ಬ್ರೈಟನ್ ಆಸ್ಪತ್ರೆಯಲ್ಲಿ ಪಾಶ್ಚಾತ್ಯ ಫ್ರಂಟ್(ಪಾಶ್ಚಾತ್ಯ ಯೂರೋಪ್‍ನ ಒಂದು ಯುದ್ಧ ವಲಯ)ನಿಂದ ಸ್ಥಳಾಂತರಿಸಲ್ಪಟ್ಟ ಗಾಯಗೊಂಡ ಭಾರತೀಯ ಸೈನಿಕರ ನರ್ಸ್ ಆದರು. ಅದರಲ್ಲಿದ್ದ ಸಿಖ್ ಸೈನಿಕರಿಗೆ "ರಣಜಿತ್ ಸಿಂಗ್‍ನ ಮೊಮ್ಮಗಳು ನರ್ಸ್ ಸಮವಸ್ತ್ರದಲ್ಲಿ ತಮ್ಮ ಹಾಸಿಗೆಯ ಬಳಿ ಕುಳಿತಿದ್ದಾಳೆ" ಎಂದು ನಂಬಲು ಸಾಧ್ಯವಾಗಿರಲಿಲ್ಲ. 1918 ರ ಜನಪ್ರತಿನಿಧಿ ಕಾಯಿದೆ ( )ಯನ್ನು ಜಾರಿಗೆ ತಂದ ನಂತರ, 30 ವರ್ಷ ವಯಸ್ಸಿನ ಮಹಿಳೆಯರಿಗೆ ಮತ ಚಲಾಯಿಸಲು ಅವಕಾಶ ದೊರೆಯಿತು. ಸಿಂಗ್ ಅವರು ಸಫ್ರಜೆಟ್ ಸಂಘದಲ್ಲಿ ಸೇರಿಕೊಂಡರು ಮತ್ತು ಮರಣದವರೆಗೂ ಅದರ ಸದಸ್ಯರಾಗಿದ್ದರು. ಅದೇ ವರ್ಷ ಅವರು ಕಾರ್ಯಕೈಗೊಂಡ ಭಾರತೀಯ ಧ್ವಜ ದಿನಾಚರಣೆ ಇಂಗ್ಲೆಂಡ್ ಮತ್ತು ಹೊಸ ದೆಹಲಿಯಲ್ಲಿ ಆಘಾತದ ಅಲೆಗಳನ್ನು ಸೃಷ್ಟಿಸಿತು. ಸೆಪ್ಟೆಂಬರ್ 1919 ರಲ್ಲಿ ಸಿಂಗ್ ಅವರು ಫ್ಯಾರಡೆ ಹೌಸ್‍ನಲ್ಲಿ, ಶಾಂತಿ ಸೈನ್ಯದ ಭಾರತೀಯ ಸೈನಿಕರಿಗೆ ಆತಿಥ್ಯ ನೀಡಿದರು. ಐದು ವರ್ಷಗಳ ನಂತರ, ಅವರು ಬಾಂಬಾ ಮತ್ತು ಕರ್ನಲ್ ಸದರ್‌ಲ್ಯಾಂಡ್‍ರೊಂದಿಗೆ ಭಾರತಕ್ಕೆ ತಮ್ಮ ಎರಡನೆಯ ಭೇಟಿಯನ್ನು ಮಾಡಿದರು. ಸಿಂಗ್ ಅವರು ಕಾಶ್ಮೀರ, ಲಾಹೋರ್, ಅಮೃತಸರ, ಮತ್ತು ಮುರ್ರೆಗೆ ಭೇಟಿ ನೀಡಿದರು. ಅಲ್ಲಿ ಅವರನ್ನವು, ತಮ್ಮ ಹಿಂದಿನ ಮಹಾರಾಜನ ಮಗಳೆಂದು ಭೇಟಿ ಮಾಡಲು ಜನಸಮೂಹ ನೆರೆದಿತ್ತು. ಈ ಭೇಟಿಯು ಭಾರತದಲ್ಲೂ ಸ್ತ್ರೀ ಮತದಾನ ಹಕ್ಕಿನ ಕೂಗನ್ನು ಹೆಚ್ಚಿಸಿತು. ತಾವು ಹೋದಲ್ಲೆಲ್ಲ ಸಫ್ರಜೆಟ್‍ನ ಪುಟ್ಟ ಬ್ಯಾಡ್ಜ್ ಅನ್ನು ಹೊಂದಿರುತ್ತಿದ್ದರು. ಅಂತಿಮವಾಗಿ ಎಮ್ಮಲೀನ್ ಪ್ಯಾನ್‍ಖರ್ಸ್ಟ್ ಜೊತೆಗೆ ಸಫರ್ಜೆಟ್ ಚಳುವಳಿಯಲ್ಲಿ ಸಿಂಗ್ ಗೌರವವನ್ನು ಪಡೆದರು. ಜೀವನದಲ್ಲಿ ಅವಳು ಪ್ರತಿಪಾದಿಸಿದ ಏಕೈಕ ಗುರಿ, "ಮಹಿಳಾ ಪ್ರಗತಿ". ವಿಕ್ಟೋರಿಯಾ ರಾಣಿ, ಲಿಟ್ಲ್ ಸೊಫಿ ಎಂಬ ಸುಂದರ-ಅಲಂಕೃತಗೊಂಡ ಗೊಂಬೆಯನ್ನು ನೀಡಿದ್ದರು. ಅದು ಆಕೆಯ ಹೆಮ್ಮೆಯ ಸ್ವತ್ತಾಗಿತ್ತು. ಆಕೆಯ ಜೀವನದ ಅಂತ್ಯ ಸಮೀಪಿಸಿದಾಗ, ಅವಳು ಗೊಂಬೆಯನ್ನು ತನ್ನ ಮನೆಗೆಲಸದ ಮಗಳಾದ ಡ್ರೊವ್ನಿಗೆ ನೀಡಿದಳು. == ಸಾಧನೆಗಳು == 14 ಜೂನ್ 1928 ರಂದು, ಸಂಸ್ಥಾಪಕೆ ಎಮ್ಮಲೀನ್ ಪ್ಯಾನ್‍ಖರ್ಸ್ಟ್‌ನ ಮರಣದ ನಂತರ, ಸಿಂಗ್ ಸಫ್ರಾಗೆಟ್ ಫೆಲೋಷಿಪ್ ಸಮಿತಿಯ ಅಧ್ಯಕ್ಷರಾದರು. ಅವರ ಅವಧಿಯಲ್ಲಿ, ಈಕ್ವಲ್ ಫ್ರ್ಯಾಂಚೈಸ್ ಆಕ್ಟ್( )ಗೆ ರಾಜ-ಒಪ್ಪಿಗೆ ನೀಡಲಾಯಿತು. ಅದರಂತೆ, ಪುರುಷರಿಗೆ ಸಮಾನವಾಗಿ ಮತ ಚಲಾಯಿಸಲು 21 ನೇ ವಯಸ್ಸಿನ ಮಹಿಳೆಯನ್ನು ಶಕ್ತಗೊಳಿಸಲಾಯಿತು. ಹೂಸ್ ಹೂ ( ' ) -1934 ರ ಆವೃತ್ತಿಯಲ್ಲಿ, "ಮಹಿಳಾ ಪ್ರಗತಿ" ಎಂದು ತಮ್ಮ ಜೀವನದ ಉದ್ದೇಶವೆಂದು ಸಿಂಗ್ ವಿವರಿಸಿದ್ದಾರೆ. ಅವರು ತಮ್ಮ ರಾಜಮನೆತನದ ಹಿನ್ನಲೆಯನ್ನು ಬಹುದೂರಕ್ಕಿಟ್ಟು, ಸಮಾನತೆ ಮತ್ತು ನ್ಯಾಯದ ಅವಶ್ಯಕತೆಯನ್ನು ಸಮರ್ಥಿಸಿಕೊಂಡರು. ಇಂಗ್ಲೆಂಡ್ ಮತ್ತು ಭಾರತದ ಇತಿಹಾಸದ ನಿರ್ಣಾಯಕ ಹಂತದಲ್ಲಿ ಪ್ರಮುಖ ಪಾತ್ರ ವಹಿಸಿದರು. == ನಿಧನ == ಆಗಸ್ಟ್ 22, 1948 ರಂದು, ಒಂದು ಕಾಲದಲ್ಲಿ ಅವಳ ಸಹೋದರಿ ಕ್ಯಾಥರೀನ್‍ನ ಒಡೆತನದ ವಾಸಸ್ಥಾನವಾದ ಕೋಲ್ಹಾಚ್ ಹೌಸ್ (ಈಗಿನ ಹಿಲ್ಡೆನ್ ಹಾಲ್)ನಲ್ಲಿ ನಿದ್ರೆಯಲ್ಲಿಯೇ ನಿಧನ ಹೊಂದಿದರು. 26 ಆಗಸ್ಟ್ 1948 ರಂದು ಗೋಲ್ಡರ್ಸ್ ಗ್ರೀನ್ ಕ್ರೆಮಟೋರಿಯಂನಲ್ಲಿ ಸಮಾಧಿ ಮಾಡಲಾಯಿತು. ಅವಳ ಮರಣದ ಮೊದಲು ಅವಳು ತನ್ನ ಅಂತ್ಯಕ್ರಿಯೆಯನ್ನು ಸಿಖ್ ಧಾರ್ಮಿಕ ಕ್ರಿಯೆಗಳ ಪ್ರಕಾರ ಮತ್ತು ಭಾರತದಲ್ಲಿ ಆಕೆಯ ಚಿತಾಭಸ್ಮವನ್ನು ಹರಡುವಂತೆ ಆಶಿಸಿದ್ದಳು. == ಉಲ್ಲೇಖಗಳು ==